ತುಮಕೂರು; ಜನರಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ನಾಟಕಗಳ ರೂಪದಲ್ಲಿ ರಾಜ್ಯಾದ್ಯಂತ ಅರಿವು ಮೂಡಿಸುತ್ತಿರುವ ಕಲಾವಿದರು ಕಾರ್ಯಕ್ರಮಗಳಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು ಇತ್ತೀಚೆಗೆ ಸರ್ಕಾರದ ಯಾವುದೇ ಯೋಜನೆಗಳು ಬಾರದ ಕಾರಣ ಕಲಾವಿದರು ಕಂಗಾಲಾಗಿದ್ದಾರೆ ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕಲಾವಿದರ ಸಹಾಯಕ್ಕೆ ಧಾವಿಸಬೇಕು ಎಂದು ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾತಂಡಗಳ ಒಕ್ಕೂಟದ ರಾಜ್ಯಾಧ್ಯಕ್ಷ ಗ್ಯಾರಂಟಿ ರಾಮಣ್ಣ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದ ರಾಜ್ಯ ಸಮಿತಿ ಸಭೆ ಮತ್ತು ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ಯಾರಂಟಿ ರಾಮಣ್ಣ ರಂಗಭೂಮಿ ಹಿನ್ನೆಲೆಯಿಂದ ಬಂದ ಕಲಾವಿದರು ಜೀವನಕ್ಕಾಗಿ ಮನೆ ಮಂದಿಯನ್ನ ಬಿಟ್ಟು ಹಾದಿ ಬೀದಿಯಲ್ಲಿ ತಮ್ಮ ಕಲಾ ಪ್ರೌಡಿಮೆಯನ್ನ ಪ್ರದರ್ಶಿಸುತ್ತಾರೆ ಸರ್ಕಾರದ ವಿವಿಧ ಇಲಾಖೆಗಳ ಅರಿವು ಕಾರ್ಯಕ್ರಮಗಳ ಕುರಿತಾಗಿ ಬೀದಿ ನಾಟಕಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಆದರೆ ಸರ್ಕಾರ ಇತ್ತೀಚೆಗೆ ಇಂತಹ ಕಾರ್ಯಕ್ರಮಗಳನ್ನ ಕಡಿತಗೊಳಿಸಿದ್ದು ಜೀವನಕ್ಕೆ ಕಲೆಯನ್ನೇ ಆಧಾರವಾಗಿಸಿ ನಂಬಿಕೊಂಡಿರುವ ಬೀದಿ ನಾಟಕ ಕಲಾವಿದರ ಬದುಕು ಮೂರಾ ಬಟ್ಟೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಕಡು ಸಂಕಷ್ಟದಲ್ಲಿರುವ ಕಲಾವಿದರ ಈ ಸಮಸ್ಯೆ ಮಧ್ಯ ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾವಿದರ ಒಕ್ಕೂಟದ ಹೆಸರಿನಲ್ಲಿ ಮತ್ತೊಂದು ಅನಧಿಕೃತ ಒಕ್ಕೂಟ ಸ್ಥಾಪನೆಯಾಗಿದ್ದು ಸರ್ಕಾರದಿಂದ ಬರುವ ವಿವಿಧ ಸೌಲಭ್ಯ ಮತ್ತು ಅನುದಾನಕ್ಕೆ ಕನ್ನ ಇಡುತ್ತಿರುವ ವಿಚಾರವು ಕಲಾವಿದರಿಗೆ ಬರಸಿಡಿಲು ಬಡಿದಂತಾಗಿದೆ ಹಾಗಾಗಿ ಈ ಕುರಿತು ಕಾನೂನು ಕ್ರಮವನ್ನ ಜರುಗಿಸಲಾಗುವುದು ಎಂದು ಗ್ಯಾರಂಟಿ ರಾಮಣ್ಣ ಅವರು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾವಿದರ ಒಕ್ಕೂಟದ ತುಮಕೂರು ಜಿಲ್ಲಾ ಘಟಕಕ್ಕೆ ಜಿಲ್ಲಾಧ್ಯಕ್ಷರಾಗಿ ದಲಿತ ರವಿ ಕುಮಾರ್, ಉಪಾಧ್ಯಕ್ಷರಾಗಿ ಹನುಮಂತರಾಯ ಕೋಟ ಗುಡ್ಡ, ಸಂಘಟನಾ ಸಂಚಾಲಕರಾಗಿ ಗೋಪಾಲ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಧ್ಯಕ್ಷರಾದ ಚಕ್ರಪಾಣಿ, ರಾಜ್ಯ ಉಪಾಧ್ಯಕ್ಷರಾದ ಮಹೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳಾ, ಗೌರವ ಸಲಹೆಗಾರರಾದ ರಾಮು ಜೋಗಿಹಳ್ಳಿ, ಡಿಸಿ ಕುಮಾರ್ ಮತ್ತು ರಾಜ್ಯ ಸಹ ಕಾರ್ಯದರ್ಶಿಯಾದ ಕಾಂತರಾಜು ಕೌತಮಾರನಹಳ್ಳಿ ಸೇರಿದಂತೆ ರಾಜ್ಯ ಮತ್ತು ಜಿಲ್ಲೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.