ತುಮಕೂರು: ಹೇಮಾವತಿ ಜಲಾಶಯದಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಹಾಗೂ ಕೆರೆ ಕೆಟ್ಟೆಗಳನ್ನು ತುಂಬಿಸಲು ನೀರು ಹರಿಸಲಾಗುತ್ತಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ತುಮಕೂರು ಶಾಖಾ ಕಾಲುವೆಗೆ ನೀರು ಹರಿದಿದ್ದು, ತಿಪಟೂರು ತಾಲ್ಲೂಕು ಗಂಗನಘಟ್ಟವನ್ನು ತಲುಪಿದೆ. ಜಲಾಶಯದ ಒಳಹರಿವಿನ ಪ್ರಮಾಣ ಯಾವುದೇ ಸಮಯದಲ್ಲಾದರೂ ಏರಿಕೆಯಾಗುವ ಸಂಭವವಿದ್ದು, ಹೆಚ್ಚುವರಿ ನೀರನ್ನು ನಾಲೆಗೆ ಬಿಡುವುದರಿಂದ ಸಾರ್ವಜನಿಕರು ನಾಲೆಯ ಅಕ್ಕ-ಪಕ್ಕ ಸುಳಿದಾಡಬಾರದು ಹಾಗೂ ಈಜಲು, ಜಾನುವಾರುಗಳಿಗೆ ನೀರು ಕುಡಿಸಲು, ಬಟ್ಟೆ ಒಗೆಯಲು, ಮತ್ತಿತರ ಕಾರಣಗಳಿಗಾಗಿ ನಾಲೆ ಬಳಿಗೆ ಹೋಗಬಾರದೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ ಮಾಡಿದ್ದಾರೆ.
ಜಿಲ್ಲೆಯ ಹೇಮಾವತಿ ಯೋಜನಾ ವ್ಯಾಪ್ತಿಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ನೀರು ಪೋಲಾಗದಂತೆ ತುರ್ತು ಕ್ರಮಗಳನ್ನು ಕೈಗೊಂಡು ಸಾರ್ವಜನಿಕರು ಮತ್ತು ರೈತರಿಗೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಸೂಕ್ತ ತಿಳುವಳಿಕೆ ನೀಡಬೇಕು.
ಸುಗಮ ನೀರು ನಿರ್ವಹಣೆ ಸಂಬಂಧ ಯೋಜನಾ ವ್ಯಾಪ್ತಿಯ ಜನರು ಹಾಗೂ ಅಚ್ಚುಕಟ್ಟುದಾರರು ಇಲಾಖಾಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.