ಪ್ರೌಢಶಾಲಾ ವಿದ್ಯಾರ್ಥಿಗಳ ಖೋ ಖೋ ಪಂದ್ಯಾವಳಿ ಯಂಗ್ ಚಾಲೆಂಜರ್ಸ್ ಸಂಸ್ಥೆ ಆಯೋಜನೆಯ ಪಂದ್ಯಾವಳಿ

ತುಮಕೂರು: ಯಂಗ್ ಚಾಲೆಂಜರ್ಸ್ ಸಂಸ್ಥೆ ಭಾನುವಾರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಿರಿಯ ಕ್ರೀಡಾಪಟು ದಿ.ಕೆ.ಎಸ್.ಶಂಕರ್ ಸ್ಮರಣಾರ್ಥ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ ಏರ್ಪಡಿಸಿತ್ತು.

ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಬಾಲಕರ 12 ಹಾಗೂ ಬಾಲಕಿಯರ 9 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು. ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಕ್ರೀಡೆ ಪ್ರೋತ್ಸಾಹಿಸಲು ಸರ್ಕಾರದ ಉದ್ಯೋಗ ನೇಮಕಾತಿಗಳಲ್ಲಿ ಕ್ರೀಡಾ ಕೋಟಾದ ಪ್ರಮಾಣ ಹೆಚ್ಚು ಮಾಡಬೇಕು. ಶಿಕ್ಷಣದ ಪ್ರಮುಖ ಭಾಗವಾಗಿ ಕ್ರೀಡೆಯನ್ನು ಶಾಲೆ, ಕಾಲೇಜುಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು ಎಂದರು.
ಹಿಂದೆ ತುಮಕೂರು ನಗರ ಕ್ರೀಡೆಗಳಿಗೆ ಹೆಸರುವಾಸಿಯಾಗಿತ್ತು. ಇಲ್ಲಿನ ಕ್ರೀಡಾ ಸಂಸ್ಥೆಗಳಲ್ಲಿ ತರಬೇತಿ ಪಡೆದ ಹಲವಾರು ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಈಗ ಎಲ್ಲಾ ಅನುಕೂಲಗಳಿದ್ದರೂ ಇಂದಿನವರಲ್ಲಿ ಕ್ರೀಡಾಸಕ್ತಿ ಕಡಿಮೆಯಾಗುತ್ತಿದೆ. ಶಾಲಾ ಹಂತದಿಂದಲೇ ಕ್ರೀಡಾಪಟುಗಳು ತಯಾರಾಗಬೇಕು ಎಂದು ಹೇಳಿದರು.
ಸ್ಮಾರ್ಟ್ ಸಿಟಿ ಲಿಮಿಟೆಡ್‍ನಿಂದ ಈ ಮೈದಾನದಲ್ಲಿ ಸುಮಾರು 15 ಕ್ರೀಡೆಗಳ ಅಭ್ಯಾಸ, ಪಂದ್ಯಾವಳಿಗೆ ಅಂಕಣಗಳು ಇವೆ. ಕ್ರೀಡಾಪಟುಗಳು ಮೈದಾನ ಹಾಳು ಮಾಡುವುದು, ಶೌಚಾಲಯದ ಕಿಟಕಿ, ಬಾಗಿಲು ಒಡೆದು ಹಾಳು ಮಾಡುವುದನ್ನು ಮಾಡಬೇಡಿ, ನಿಮ್ಮ ಮನೆಯಂತೆ ಅಂಕಣಗಳನ್ನೂ ಸುರಕ್ಷಿತವಾಗಿ ನೋಡಿಕೊಳ್ಳಿ ಎಂದರು.
ಗುಬ್ಬಿ ಚನ್ನಬಸವೇಶ್ವರ ಕ್ರೀಡಾ ಸಂಸ್ಥೆ ಅಧ್ಯಕ್ಷ ಶಂಕರ್‍ಕುಮಾರ್ ಮಾತನಾಡಿ, ಇಂದು ಶಿಕ್ಷಣ ಇಲಾಖೆಯಿಂದ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ದೊರೆಯುತ್ತಿಲ್ಲ. ಅನೇಕ ಶಾಲೆ, ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲ, ಅಂತಹ ಕಡೆಗಳಲ್ಲಿ ಕ್ರೀಡಾಚಟುವಟಿಕೆಗಳಿಗೆ ಆದ್ಯತೆ ನೀಡುತ್ತಿಲ್ಲ. ಖಾಸಗಿ ಕ್ರೀಡಾ ಸಂಸ್ಥೆಗಳು ಕ್ರೀಡಾಕೂಟ ಆಯೋಜನೆ ಮಾಡುತ್ತಾ ಕ್ರೀಡಾ ಚಟುವಟಿಕೆಗಳು ಮುನ್ನಡೆಯಲು ಸಹಕರಿಸುತ್ತಿದ್ದಾರೆ ಎಂದರು.
ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ಎ.ಎನ್.ಪ್ರಭಾಕರ್, ಯಂಗ್ ಚಾಲೆಂಜರರ್ಸ್ ಸಂಸ್ಥೆಯ ಪ್ರೊ. ಶಿವಪ್ರಕಾಶ್, ಸಂಗಪ್ಪ, ಸಂಜಯ್, ಉಮೇಶ್‍ಕುಮಾರ್, ಡಾ.ಪ್ರಸನ್ನ, ನಗರಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ್, ಕಬ್ಬಡಿ ತರಬೇತುದಾರ ಇಸ್ಮಾಯಿಲ್, ವೆಂಕಟೇಶ್, ಲೋಕೇಶ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!