ತಿಪಟೂರು :*ಸುಭದ್ರ, ಸುಭಿಕ್ಷ, ಸುಶಿಕ್ಷ, ಸುರಕ್ಷವಾದ ರಾಷ್ಟ್ರ ನಮ್ಮದಾಗಲು ಶ್ರಮಿಸುತ್ತಿರುವ ಗುರುಗಳು, ವೈದ್ಯರು, ಪತ್ರಕರ್ತರು, ಸೈನಿಕರೆಲ್ಲರನ್ನೂ ಸ್ಮರಿಸುವ ವಿಶೇಷ ದಿನಗಳನ್ನೊಳಗೊಂಡಿರುವ ಈ ಮಾಸದಲ್ಲಿ ಅನ್ನದಾತನಾದ ರೈತನನ್ನೂ ಸ್ಮರಿಸುತ್ತಾ ಈ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸೋಣ, ಹುತಾತ್ಮ ಯೋಧರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸೋಣ. ಹಾಗೂ ಇಂದಿನ ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವ ಪ್ರಯತ್ನ ಮಾಡೋಣ: ಲತಾಮಣಿ ಎಂ ಕೆ ತುರುವೇಕೆರೆ, ಅಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ತಾಲ್ಲೂಕು ಘಟಕ ತಿಪಟೂರು.*
ಜುಲೈ ತಿಂಗಳಲ್ಲಿ ಬರುವ ಪತ್ರಿಕೋದ್ಯಮ ದಿನಾಚರಣೆ, ಗುರು ಪೂರ್ಣಿಮಾ, ವೈದ್ಯರ ದಿನ, ಕಾರ್ಗಿಲ್ ವಿಜಯ್ ದಿವಸ್ ಸೈನಿಕರ ಸ್ಮರಣೆಯೊಂದಿಗೆ ರಾಷ್ಟ್ರದ ಬೆನ್ನೆಲುಬು ಹಾಗೂ ಅನ್ನದಾತನಾದ ರೈತನನ್ನು ಸ್ಮರಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮವು ಧರ್ಮಾತೀತವಾಗಿ, ಲಿಂಗ ತಾರತಮ್ಯವಿಲ್ಲದೆ ಎಲ್ಲರಿಗೂ ಫಲಪ್ರದವಾಗಲಿ ಎಂದು ಆಶಿಸುತ್ತಾ,
ಪ್ರತಿಯೊಂದು ರಂಗದಲ್ಲಿಯೂ ತನ್ನದೇ ಆದ ಸ್ಥಾನವನ್ನು ಪಡೆದು ಸಾಧನೆಯತ್ತ ಸಾಗುತ್ತಿರುವ ಸ್ತ್ರೀ, ಸೇನೆಯಲ್ಲಿಯೂ ತನ್ನ ಶಕ್ತಿ ಸಾಮರ್ಥ್ಯವನ್ನು ತೋರುತ್ತಾ ದೇಶಪ್ರೇಮವನ್ನು ಸಾರುತ್ತಿರುವುದು ನಿಜಕ್ಕೂ ಪ್ರಶಂಸನೀಯ ಹಾಗೂ ಹೆಮ್ಮೆಯ ವಿಷಯವಾಗಿದೆ.
ಅಂತೆಯೇ 1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಗರ್ಭಿಣಿಯಾಗಿದ್ದರೂ ದಿಟ್ಟತನದಿಂದ ತನ್ನ ಕರ್ತವ್ಯವನ್ನು ಮೆರೆದ ನಾರಿ ಯಾಷಿಕಾ ಹತ್ವಾಲ್ ರವರ ಧೈರ್ಯ, ದೇಶಭಕ್ತಿ, ರಾಷ್ಟ್ರಾಭಿಮಾನ, ಕರ್ತವ್ಯ ಪ್ರಜ್ಞೆ ಮತ್ತು ನಿಷ್ಠೆ ನಮ್ಮೆಲ್ಲರಿಗೂ ಮಾದರಿಯಾಗಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಿಪಟೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಲತಾಮಣಿ ಎಂ ಕೆ ತುರುವೇಕೆರೆ ತಿಳಿಸಿದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ತಿಪಟೂರು ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಹಸೀನಾ ಹೆಚ್ ಕೆ. ಪ್ರಾಧ್ಯಾಪಕರು ಇತಿಹಾಸ ಪ್ರಾಕ್ತನ ಶಾಸ್ತ್ರ ವಿಭಾಗ, ಕುವೆಂಪು ಯೂನಿವರ್ಸಿಟಿ ಶಿವಮೊಗ್ಗ ಅವರು ಕಾರ್ಗಿಲ್ ವಿಜಯ್ ದಿವಸ್ ಎಂಬುದು ಒಂದು ಸಂಭ್ರಮದ ದಿನ ಎನ್ನುವುದಕ್ಕಿಂತಲೂ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಹಾಗೂ ಅವರ ಕುಟುಂಬಗಳಿಗೆ ಧೈರ್ಯ ತುಂಬಿ, ಸಹಕಾರಿಯಾಗುವ ದಿನವಾಗಬೇಕಿದೆ ಎಂದು ಹೇಳುತ್ತಾ ಕಾರ್ಗಿಲ್ ಯುದ್ಧದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದಂತಹ ಕಾರ್ಗಿಲ್ ಯುದ್ಧದಲ್ಲಿ ನೇರವಾಗಿ ಎದುರಾಳಿಯೊಂದಿಗೆ ಸೆಣೆಸಾಡಿ ವಿಜಯ ಸಾಧಿಸಿದ ಹಿರಿಯ ಹಾಗೂ ನಿವೃತ್ತ ಸೈನಿಕರಾದ ಸುಬೇದಾರ್ ಚಂದ್ರಶೇಖರಪ್ಪನವರು ಯುದ್ಧ ಭೂಮಿಕೆಯಲ್ಲಿ ತಮಗಾದ ಅನುಭವಗಳನ್ನು, ಸಾವಿರಾರು ಅಡಿ ಎತ್ತರದಲ್ಲಿ ನಿಂತು ಹೋರಾಡಿದ ವೀರಾವೇಶವನ್ನು, ಯುದ್ಧಭೂಮಿಯ ನೀತಿ ನಿಯಮಗಳನ್ನು ವಿವರಿಸಿದರು.
ಈ ದಿನದ ಸಂಭ್ರಮಾಚರಣೆಗೆ ಸಾಕ್ಷಿಯಾದ ಪತ್ರಕರ್ತ ಭಾಸ್ಕರಾಚಾರ್ ರವರು ಯುದ್ಧದಲ್ಲಿ ಮದ್ದು ಗುಂಡುಗಳನ್ನು ಸಿಡಿಸುವಂತೆ ಶಬ್ದ ಹಾಗೂ ವಾಯು ಮಾಲಿನ್ಯರಹಿತವಾದ ಸಿಡಿಮದ್ದನ್ನು ಸಿಡಿಸಿ ಕಾರ್ಯಕ್ರಮೋಚಿತವಾಗಿ ವಿಶೇಷವಾಗಿ ಉದ್ಘಾಟಿಸಿದ ರೀತಿಯನ್ನು ಪ್ರಶಂಸಿಸಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಎಲ್ಲಾ ಕಾರ್ಯಕ್ರಮಗಳು ವಿಶೇಷ ವಿಭಿನ್ನ ಮೌಲ್ಯಭರಿತ ಹಾಗೂ ಅರ್ಥಗರ್ಭಿತವಾದ ಸರಳ ಸಜ್ಜನಿಕೆಗೆ ಪ್ರಸಿದ್ಧಿಯಾಗಿದೆ ಇವರ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀಮತಿ ಜಯಲಕ್ಷ್ಮೀ ರವರು ಕಾರ್ಗಿಲ್ ಯುದ್ಧದ ಸಂಪೂರ್ಣ ಮಾಹಿತಿಯನ್ನು ನೀಡಿ ನೆರೆದಿದ್ದವರ ಗಮನ ಸೆಳೆದರು. ಈ ಸಂದರ್ಭದಲ್ಲಿ ಧರಣೇಶ್ ಪತ್ರಿಕಾ ಮಾಧ್ಯಮದವರು, ಪೋಷಕರು ಮತ್ತು ಮಕ್ಕಳು ನೆರೆದಿದ್ದರು.
ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಿಪಟೂರು ತಾಲ್ಲೂಕು ಘಟಕದ ಕಾರ್ಯದರ್ಶಿ ಶಿಲ್ಪಾ ಎನ್, ಎಲ್ಲರನ್ನೂ ಸ್ವಾಗತಿಸಿದರು, ವೇದಿಕೆಯ ಸಹ ಕಾರ್ಯದರ್ಶಿ ಕುಮಾರಿ ಕುಸುಮ ಕೆ. ಜೆ. ತುರುವೇಕೆರೆ ಪ್ರಾರ್ಥಿಸಿದರು, ವೇದಿಕೆಯ ನಿರ್ದೇಶಕರಾದ ರಂಜಿತಾ ಆನಂದ್ ನಿರೂಪಿಸಿದರು ಹಾಗೂ ಮನು ರವರು ವಂದಿಸಿದರು.