ತುಮಕೂರು: ಮಹಿಳೆಗೆ ನೀಡುವ ಯಾವುದೇ ಕೊಡುಗೆ ಮತ್ತೆ ದ್ವಿಗುಣವಾಗಿ ಸಮಾಜಕ್ಕೆ ಮರುಸಂದಾಯವಾಗುತ್ತದೆ. ಇಂತಹ ಗುಣ ಹೊಂದಿರುವ ಮಹಿಳೆಗೆ ಶಿಕ್ಷಣ, ಅಧಿಕಾರ ಮತ್ತು ಉನ್ನತ ಸ್ಥಾನ-ಮಾನ ನೀಡುವುದು ಅಗತ್ಯವಾಗಿದೆ ಎಂದು ಕರ್ನಾಟಕ ಮಹಿಳಾ ಉದ್ಯಮಿಗಳ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸಿ ಭುವನೇಶ್ವರಿ ಅವರು ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಾಹೇ ವಿವಿ, ಕಾಲೇಜಿನ ಐಕ್ಯೂಎಸಿ ವಿಭಾಗದ ಮಹಿಳಾ ಸಂವರ್ದನಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಸೋಮವಾರ (ಮಾ.೯) ಹಮ್ಮಿಕೊಳ್ಳಲಾಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆಯಲ್ಲಿರುವ ದ್ವನಿಗೆ ಅಪಾರವಾದ ಶಕ್ತಿಯಿದೆ. ಅ ಧ್ವನಿಗೆ ಹೆಚ್ಚು ಬೆಂಬಲ ಸಿಕ್ಕಾಗ ಸಮಾಜದ ಅಭಿವೃದ್ದಿಗೆ ಹೆಚ್ಚು ಅವಕಾಶಗಳು ದೊರೆಯುತ್ತವೆ. ನಾವೆಲ್ಲರೂ ಮಹಿಳೆಯರಿಗೆ ಗೌರವ ನೀಡಬೇಕು. ಬರಿ ಘೋಷಣೆ-ಚಳುವಳಿಗೆ ಸೀಮಿತವಾಗದೆ. ಮಹಿಳೆಯರಿಗೆ ಆದ್ಯತೆ ಮತ್ತು ಅವಕಾಶ ನೀಡಿ ಎಂದು ಸಿ ಭುವನೇಶ್ವರಿ ಅವರು ಕರೆ ನೀಡಿದರು.
ಸಾಹೇ ಉಪಕುಲಪತಿಗಳಾದ ಡಾ.ಕೆ.ಬಿ.ಲಿಂಗೇಗೌಡ ಮಾತನಾಡಿ, ಸಮಾಜದಲ್ಲಿನ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆ ಕೆಲಸ ಮಾಡುವುದನ್ನು ನಾವಿಂದು ಕಾಣುತ್ತಿದ್ದೇವೆ. ಇನ್ನಷ್ಟು ಆರ್ಥಿಕ ಸಬಲೀಕರಣಕ್ಕೆ ಆದ್ಯತೆ ನೀಡುವುದಕ್ಕೆ ನಾವೆಲ್ಲರೂ ಮುಂದಾಗೋಣ ಎಂದರು.
ಸಾಹೇ ವಿವಿ ಪರೀಕ್ಷಾಂಗ ನಿಯಂತ್ರಕರಾದ ಡಾ.ಜಿ.ಗುರುಶಂಕರ್ ಅವರು ಮಾತನಾಡಿ, ಶೇಕಡ ೬೦ರಷ್ಟು ಮಹಿಳೆ ಸಮುದಾಯ ಇಂದು ಉದ್ಯೋಗ ಕ್ಷೇತ್ರದಲ್ಲಿ ನಿರತರಾಗಿರುವುದನ್ನು ನೋಡಬಹುದು. ಮಹಿಳೆಯರ ಶಕ್ತಿ ಏನು ಎಂಬುದನ್ನು ಚುನಾವಣೆಯಲ್ಲಿ ಇತ್ತೀಚಿನ ದಿನದಲ್ಲಿ ಗಮನಿಸಬಹುದು. ಮಹಿಳೆ ಪ್ರಧಾನಮಂತ್ರಿಯಾಗಿದ್ದು ಇಂದಿರಾಗಾಂಧಿ, ಸುಧಾ ಮೂರ್ತಿ ಸೇರಿದಂತೆ ಅನೆಕ ಮಹಿಳೆಯರು ಐತಿಹಾಸಿಕವಾದ ಕೆಲಸಗಳನ್ನು ಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಶ್ರೀ ಸಿದ್ಧಾರ್ಥ ಮಹಾ ತಾಂತ್ರಿಕ ವಿದ್ಯಾನಿಲಯದ ಪ್ರಾಂಶುಪಾಲರಾದ ಡಾ.ಮಹಾಂತೇಶ್.ಎA. ನಡಕಟ್ಟಿ ಅವರು ಮಾತನಾಡಿ, ಮಹಿಳೆ ಎಂದರೆ ಕೇವಲ ಶಕ್ತಿಯಲ್ಲ ಅವಳು ತ್ಯಾಗದ ಪ್ರತಿರೂಪ ಬಾಲ್ಯದಲ್ಲಿ ಮಗಳಾಗಿ, ವಿದ್ಯಾರ್ಥಿನಿಯಾಗಿ ನಂತರ ಸೊಸೆಯಾಗಿ, ಪತ್ನಿಯಾಗಿ, ತಾಯಿಯಾಗಿ ಅವಳು ನಿರಂತರ ಸೇವೆ ಸಲ್ಲಿಸುತ್ತಾಳೆ. ಬೆಳಗ್ಗೆಯಿಂದ ರಾತ್ರಿವರೆಗೆ ದುಡಿಯುವ ಅವಳ ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದು ನಮ್ಮ ಮೊದಲನೇ ಆದ್ಯತೆಯಾಗಬೇಕು ಎಂದರು.
ಮಹಿಳೆ ಎದುರಿಸುತ್ತಿರುವ ದೌರ್ಜನ್ಯ, ಅಸಮಾನತೆಯ ವಿರುದ್ಧ ನಾವೆಲ್ಲರೂ ಒಟ್ಟಾಗಿ ಧ್ವನಿ ಎತ್ತೋಣ. ಮಹಿಳೆ ಹೊಸ ಭಾರತೀಯ ಸಮಾಜದ ಶಿಲ್ಪಿಗಳು. ನಿಮ್ಮ ಕನಸಿಗೆ ಮಿತಿ ಇಲ್ಲ. ನಿಮ್ಮ ಛಲಕ್ಕೆ ಅಡ್ಡಿ ಇಲ್ಲ. ಧೈರ್ಯದಿಂದ ಮುನ್ನುಗ್ಗಿ ಮುನ್ನಡೆಯಿರಿ ಎಂದು ಅವರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಡೀನ್ಗಳಾದ ಡಾ. ಸುಮ.ಆರ್, ಡಾ. ದಿವ್ಯಪ್ರಭ, ಐಕ್ಯೂಎಸಿ ಸಂಯೋಜಕರಾದ ಡಾ.ರವಿರಾಮ್.ವಿ, ಪ್ರಾಧ್ಯಾಪಕರಾದ ಡಾ. ಅಶ್ವಿನಿ ಎಸ್. ಶಿವಣ್ಣವರ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತಿಯಲ್ಲಿದ್ದರು.