ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರಕ್ಕೆ ಸೌತ್ ಇಂಡಿಯಾ ಮೀಡಿಯಾ ಅವಾಡ್ರ್ಸ್ ಗರಿಮೆ

ತುಮಕೂರು: ಮಾಧ್ಯಮ ಶಿಕ್ಷಣ ಕ್ಷೇತ್ರದ ಗುಣಮಟ್ಟದ ಪ್ರಗತಿ, ಆಧುನಿಕ ತಂತ್ರಜ್ಞಾನದ ಅಳವಡಿಕೆ ಮತ್ತು ಉದ್ಯಮ ಕ್ಷೇತ್ರಕ್ಕೆ ಪೂರಕವಾದ ಪಠ್ಯಕ್ರಮ ಹಾಗೂ ಪ್ರಾಯೋಗಿಕ ಕಲಿಕೆ ಅವಕಾಶ ಸೇರಿದಂತೆ ಸರ್ವಾಂಗೀಣ ಕೊಡುಗೆಗಳನ್ನು ಪರಿಗಣಿಸಿ ರಾಜ್ಯ ಅತ್ಯುತ್ತಮ ಮಾಧ್ಯಮ ಕಾಲೇಜುಗಳಲ್ಲಿ ಕರ್ನಾಟಕದಿಂದ ತುಮಕೂರಿನ ಶ್ರೀ ಸಿದ್ದಾರ್ಥ ಮಾಧ್ಯಮ ಕೇಂದ್ರಕ್ಕೆ ಪ್ರಸಕ್ತ ಸಾಲಿನ ‘ಸೌತ್ ಇಂಡಿಯಾ ಮೀಡಿಯಾ ಅವಾಡ್ರ್ಸ್-2025 ಪ್ರಶಸ್ತಿ ಸಂದಿದೆ.
ಬೆಂಗಳೂರಿನ ಅರಮನೆ ಆವರಣದಲ್ಲಿ ಇತ್ತೀಚಿಗೆ ನಟ ರಘು ಭಟ್ ನೇತೃತ್ವದಲ್ಲಿ ಆಯೋಜಿಸಲಾದ ಟಿಎನ್‍ಐಟಿ ದಕ್ಷಿಣ ಭಾರತೀಯ ಮಾಧ್ಯಮ ಪ್ರಶಸ್ತಿಗಳು ವಿತರಣಾ ಸಮಾರಂಭದಲ್ಲಿ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರಕ್ಕೆ ಪ್ರಶಸ್ತಿಯನ್ನು ಕೊಡಮಾಡಲಾಯಿತು. ಸಂಸ್ಥೆಯ ಪರವಾಗಿ ನಿರ್ದೇಶಕರಾದ ಡಾ.ಬಿ.ಟಿ.ಮುದ್ದೇಶ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಜನಸಮುದಾಯದ ದನಿಗೆ ಧ್ವನಿಯಾಗಿರುವ ಸಿದ್ಧಾರ್ಥ ಸಮುದಾಯ ಬಾನುಲಿ, ಮಾಧ್ಯಮ ಕೇಂದ್ರದ ವಿದ್ಯಾರ್ಥಿಗಳಿಂದಲೇ ನಿರ್ಮಾಣವಾಗುತ್ತಿರುವ ಸಾಕ್ಷ್ಯಚಿತ್ರಗಳು ಮತ್ತು ಟೆಲಿವಿಷನ್ ಕಾರ್ಯಕ್ರಮಗಳು, ಮಾಧ್ಯಮ ಕ್ಷೇತ್ರದ ಕಲಿಕೆಗೆ ಬೇಕಾದ ಅಗತ್ಯವಾದ ಕಂಪ್ಯೂಟರ್ ಲ್ಯಾಬ್, ರೇಡಿಯೋ ಮತ್ತು ಟಿವಿ ಸ್ಟುಡಿಯೋ ಸೌಕರ್ಯಗಳನ್ನು ಹೊಂದಿರುವ ಸಂಸ್ಥೆಯ ಮೂಲಸೌಕರ್ಯಗಳನ್ನು ಪ್ರಶಸ್ತಿಯ ಮಾನದಂಡವಾಗಿ ಪರಿಗಣಿಸಲಾಗಿದೆ.

 

ರಾಜ್ಯದ 12 ಕಾಲೇಜುಗಳು ಆಯ್ಕೆ ಪ್ರಕ್ರಿಯೆ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ಟೆಲಿವಿಷನ್ ಚಾನೆಲ್‍ನ ವೃತ್ತಿಪರರು, ನಾಮ ನಿರ್ದೇಶನ ಸಮಿತಿ ಸದಸ್ಯರು ಮತ್ತು ತಜ್ಞರು ಸೇರಿ ಅಂತಿಮವಾಗಿ ತುಮಕೂರು ನಗರದ ಎಸ್‍ಎಸ್‍ಐಟಿ ಕ್ಯಾಂಪಸ್ ನಲ್ಲಿರುವ ಶ್ರೀ ಸಿದ್ದಾರ್ಥ ಮಾಧ್ಯಮ ಕೇಂದ್ರವನ್ನು ಪ್ರಶಸ್ತಿಗೆ ಘೋಷಣೆ ಮಾಡಿದ್ದಾರೆ.
ಸಮಾರಂಭದಲ್ಲಿ ಚಿತ್ರನಟರಾದ ನಟ ಪ್ರೇಮ್, ರಾಗಿಣಿ ದ್ವಿವೇದಿ, ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಟಿಎನ್‍ಐಟಿ ಮುಖ್ಯಸ್ಥ ರಘು ಭಟ್, ನಟ ಶೀಲಂ, ಚಲನಚಿತ್ರ ನಿರ್ದೇಶಕ ಸಿಂಪಲ್ ಸುನಿ, ರೇಡಿಯೋ ಜಾಕಿ ಅಮಿತ್, ನಿರ್ಮಾಪಕ ಆರ್ ಜೆ. ಲೋಕೇಶ್, ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು, ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋದ ಮಾಜಿ ಕಾರ್ಯನಿರ್ವಾಹಕ ನಿರ್ಮಲಾ ಎಲಿಗರ್, ಎವಿಆರ್ ಪ್ರತಿನಿಧಿ ಶೈಲೇಶ್ ಕುಮಾರ್, ಟಿಎನ್‍ಐಟಿ ಸಂಪಾದಕಿ ಮೀರಾ ಮತ್ತು ಸುಗುಣ ರಘು ಭಟ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಕಳೆದ ಏಳು ವರ್ಷಗಳಿಂದ, ದಿ ನ್ಯೂ ಇಂಡಿಯನ್ ಟೈಮ್ಸ್ (ಟಿಎನ್‍ಐಟಿ) ಮೂಲಕ ಕರ್ನಾಟಕದಲ್ಲಿ ಟಿಎನ್‍ಐಟಿ ಮಾಧ್ಯಮ ಪ್ರಶಸ್ತಿಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದಾರೆ. ಇದೇ ಪ್ರಥಮ ಬಾರಿಗೆ ಈ ವರ್ಷ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದ ಮಾಧ್ಯಮ ವೃತ್ತಿಪರರನ್ನು ಮತ್ತು ಕರ್ನಾಟಕದ ಎಲೆಕ್ಟ್ರಾನಿಕ್ ಮಾಧ್ಯಮದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ವರದಿಗಾರರು, ನಿರೂಪಕರು ಎಡಿಟಿಂಗ್ ವಿಭಾಗದವರು, ಕ್ಯಾಮೆರಾಮೆನ್‍ಗಳು ಹಾಗೂ ಮಾಧ್ಯಮ ಕಾಲೇಜುಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು.

 

ಡಾ.ಜಿ.ಪರಮೇಶ್ವರ ಪ್ರಶಂಸೆ:
ಜನಸಮುದಾಯದಲ್ಲಿ ಸಾಮಾಜಿಕ ಜಾಗೃತಿ, ಅರಿವು ಮತ್ತು ಮಾಧ್ಯಮ ಶಿಕ್ಷಣವನ್ನು ತುಮಕೂರಿನಂತ ಪ್ರದೇಶದಲ್ಲಿ ಮಾಡಿ, ಗುರುತಿಸಿಕೊಳ್ಳಬಹುದು ಎಂಬುದಕ್ಕೆ ಮಾಧ್ಯಮ ಕೇಂದ್ರ ಸಾಕ್ಷಿಯಾಗಿದೆ. ಮಾಧ್ಯಮದ ಮೇಲಿನ ಪ್ರೀತಿ ಮತ್ತು ಇಚ್ಛಾಶಕ್ತಿಯಿಂದಾಗಿ ಮಿಡಿಯಾ ಮತ್ತು ರೇಡಿಯೋ ಕೇಂದ್ರಗಳನ್ನು ಸ್ಥಾಪಿಸಿ, ನೂರಾರು ಗ್ರಾಮೀಣ ವಿದ್ಯಾರ್ಥಿಗಳು ಮಾಧ್ಯಮ ಕ್ಷೇತ್ರದಲ್ಲಿ ಮತ್ತು ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳಲು ನಮ್ಮ ಮಾಧ್ಯಮ ಸಂಸ್ಥೆ ಕಾರಣವಾಗಿದೆ ಎಂಬುದು ಖುಷಿ ಸಂಗತಿ. ದಕ್ಷಿಣ ರಾಜ್ಯಗಳ ಮಟ್ಟದಲ್ಲಿ ಗುರಿತಿಸಲ್ಪಟ್ಟಿರುವ ಶ್ರೀ ಸಿದ್ದಾರ್ಥ ಮಾಧ್ಯಮ ಸಂಸ್ಥೆ ಬದಲಾಗುತ್ತಿರುವ ಮಾಧ್ಯಮ ಜಗತ್ತಿಗೆ ಹೊಸತನದ ಶಿಕ್ಷಣದ ಕಲಿಕೆ ಮತ್ತು ವೃತ್ತಿ ನಿರೀಕ್ಷೆಗಳನ್ನು ಹೆಚ್ಚಿಸಲು ಮುಂದಾಗುತ್ತಿದೆ ಎಂದು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮತ್ತು ಸಾಹೇ ಕುಲಾಧಿಪತಿಗಳಾದ ಡಾ.ಜಿ.ಪರಮೇಶ್ವರ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ ಎಸ್ ರವಿಪ್ರಕಾಶ ರವರು “ಎರಡು ದಶಕಗಳಿಂದ ಮಾಧ್ಯಮ ಕೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರವು ಮಾಧ್ಯಮ ರಂಗಕ್ಕೆ ಸಾಕಷ್ಟು ಪ್ರತಿಭಾವಂತರನ್ನು ನೀಡುತ್ತಾ ಬಂದಿದ್ದು ಇಂದು ಕೂಡ ಅದೇ ದಿಕ್ಕಿನಲ್ಲಿ ನಡೆಯುತ್ತಿದೆ. ಇದನ್ನು ಗುರುತಿಸಿರುವ ‘ದಿ ನ್ಯೂ ಇಂಡಿಯನ್ ಟೈಮ್ಸ್’ ಸಂಸ್ಥೆಯು ತಾನು ನೀಡುವ ‘ಟಿ.ಎನ್.ಐ.ಟಿ. ಸೌತ್ ಇಂಡಿಯನ್ ಮೀಡಿಯಾ ಅವಾರ್ಡ್ – 2025’ ರಲ್ಲಿ ‘ಬೆಸ್ಟ್ ಜರ್ನಲಿಸಂ ಕಾಲೇಜ್ ಇನ್ ಕರ್ನಾಟಕ’ (ಕರ್ನಾಟಕದ ಅತ್ಯುತ್ತಮ ಮಾಧ್ಯಮ ಕಾಲೇಜು) ಪ್ರಶಸ್ತಿಯನ್ನು ನೀಡಿರುವುದು ನಮ್ಮ ಸಂಸ್ಥೆಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ’ ಎಂದು ಶ್ಲಾಘಿಸಿದರು.

Leave a Reply

Your email address will not be published. Required fields are marked *

error: Content is protected !!