ಗುಬ್ಬಿ ಸುದ್ದಿ: ತಾಲೂಕಿನ ಕಡಬ ಹೋಬಳಿ ಕುಣಾಘಟ್ಟ ಗ್ರಾಮದಲ್ಲಿ ಇಂದು ಶ್ರೀ ರಾಮಾನುಜಾ ಸೇವಾ ಸಮಿತಿ(ರಿ) ವತಿಯಿಂದ ಲಕ್ಷ್ಮಿ ನರಸಿಂಹ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರತಿ ವರ್ಷದಂತೆ ಈ ಬಾರಿಯು ಶ್ರೀ ರಾಮಾನುಜ ಸೇವಾ ಸಮಿತಿಯು ನರಸಿಂಹ ಜಯಂತಿ ಅಂಗವಾಗಿ ಪುಣ್ಯಾಹ, ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕವನ್ನು ನೆರವೇರಿಸಿ ಶಾಂತಿ ಹೋಮ, ನರಸಿಂಹ ಹೋಮ, ಗಣ ಹೋಮವನ್ನು ಲೋಕ ಕಲ್ಯಾಣಾರ್ಥಕ್ಕಾಗಿ ಅಪಾರ ಭಕ್ತರ ಸಮುಖದಲ್ಲಿ ನೆರವೇರಿಸಿ ನಂತರ ಪೂರ್ಣಹೂತಿಯೊಂದಿಗೆ ಹೋಮವನ್ನು ಮುಕ್ತಾಯಗೊಳಿಸಲಾಯಿತು. ಸ್ವಾಮಿಯವರನ್ನು ಮೆರವಣಿಗೆಯ ಮೂಲಕ ಗೋವಿಂದ ಗೋವಿಂದ ನಾರಾಯಣ ನಾರಾಯಣ ಎಂಬ ಜಪದೊಂದಿಗೆ ಬಂದ ಅಪಾರ ಭಕ್ತರು ಸ್ವಾಮಿಯವರ ಜೊತೆಗೆ ಬಿಸಿಲಿನ ದಗೆಯಲ್ಲೂ ಹೆಜ್ಜೆಯನ್ನು ಹಾಕುವ ಮೂಲಕ ತಮ್ಮ ಭಕ್ತಿಯನ್ನು ಅರ್ಪಿಸಿದರು.
ಸ್ವಾಮಿಯವರಿಗೆ ವಿಶೇಷ ವಿವಿಧ ಹೂವಿನ ಅಲಂಕಾರದೊಂದಿಗೆ ಆಕರ್ಷಿಸುತ್ತಾ ಇರುವುದು ಭಕ್ತರ ಕಣ್ಣಿಗೆ ಹೊಳೆಯುತಾ ಇರುವುದು ಕಂಡು ಬಂತು. ನಂತರ ಸಾಮಿಯವರಿಗೆ ವಿವಿಧ ರೀತಿಯ ಆರತಿಯನ್ನು ನೆರವೇರಿಸಿ ಮಹಾ ಮಂಗಳಾರತಿ ನೆರವೇರಿಸಿ ಬಂದ ಭಕ್ತರಿಗೆ ತೀರ್ಥ ಪ್ರಸಾದವನ್ನು ನೀಡಲಾಯಿತು.
ಅರ್ಚಕರಾದ ಕೇಶವಮೂರ್ತಿ, ರಘು ಶರ್ಮ, ನರಸಿಂಹನ್ ಶಾಸ್ತ್ರಿ, ದರ್ಶನ್, ಕೃಷ್ಣ, ಅವರ ನೇತೃತ್ವದಲ್ಲಿ ಸ್ವಾಮಿಯವರ ಕೈಂಕರ್ಯಗಳನ್ನು ನಡೆಸಿಕೊಟ್ಟರು.